Sunday, December 23, 2018

ಶಂಖ ಪರಿವಾರದ ಜೊತೆ ಒಂದು ದಿನ

ತೂಗುದೀಪ ಶ್ರೀನಿವಾಸ್ ಮಾದರಿಯಲ್ಲಿ ಗಹಗಹಿಸಿ ನಗುತ್ತಿದ್ದ ಸದ್ದು ಅಲ್ಲೆಲ್ಲಾ ಪ್ರತಿಧ್ವನಿಸಿತ್ತು.. ಹತ್ತು ವರ್ಷಗಳಿಂದ ಈ ಸದ್ದು ಕೇಳಿ ಅಭ್ಯಾಸವಾಗಿದ್ದ ಈ ನಗುವಿನ ಅಲೆಯ ಹಿಂದೆ ಇದ್ದ ವ್ಯಕ್ತಿ ಯಾರು ಎನ್ನುವುದು ಗೊತ್ತಿತ್ತು.. ಎಲ್ಲರೂ ಇವನ ಕಡೆ ನೋಡಿ ಒಂದು ನಗೆ ಬೀರಿದರು..

"ಏನೋ ರಾಜ.. ಬಹಳ ಖುಷಿಯಾಗಿದ್ದೀಯ.. ಏನು ಸಮಾಚಾರ" ಅಲ್ಲಿದ್ದ ಒಬ್ಬ ಕೇಳಿದ

"ಇವತ್ತು ನನ್ನ ಕುಟುಂಬ ವೃಕ್ಷದ ಕೆಲವು ಕೊಂಬೆಗಳನ್ನು ನೋಡಬಹುದು ಅಂತ ಖುಷಿ"

"ಹೌದಾ.. ಸರಿ ನೀ ಹೋಗಿ ಬಾ.. ನಿನ್ನ ಕತೆ ಕೇಳಲು ನಾ ಇಲ್ಲಿಯೇ ಕಾಯುತ್ತಿರುವೆ.. " ಎಂದು ಹೇಳಿ ಆ ವ್ಯಕ್ತಿ ನೆಡೆಯುತ್ತ ಹೋಗಿ ಆ ತಿರುವಿನಲ್ಲಿ ಮರೆಯಾದ..

*****

ಉತ್ಸುಕತೆಯಿಂದ ಕಾಯುತ್ತಿದ್ದವ.. ಅರಳಿಕಟ್ಟೆಯಲ್ಲಿ ಕೂತಿದ್ದ.. 

ಹಣೆಯಲ್ಲಿ ಢಾಳಾದ ವಿಭೂತಿ.. ಅದರ ಮಧ್ಯೆ ಕುಂಕುಮ, ಬಿಳಿ ಪಂಚೆ, ಶಲ್ಯ ಹೊದ್ದು.. ಮೊಗದ ಮೇಲೆ ದೇಶಾವರಿ ನಗೆ ಬೀರುತ್ತಾ ರಾಜ ಬಂದ.. 

"ಹೇಗಿತ್ತಪ್ಪ ನಿನ್ನ ಭೂಲೋಕ ಪಯಣ.. ಅದರ ಬಗ್ಗೆ ಹೇಳು ಮಾರಾಯ.. !"

"ನನ್ನ ಕುಟುಂಬದ ವೃಕ್ಷ ಹರಡಿರುವ ರೀತಿ ಖುಷಿಯಾಗುತ್ತಿದೆ.. ಕರುನಾಡಿನಿಂದ.. ದಾಟಿ ಸಪ್ತಸಾಗರದಾಚೆಗೆ ಹಬ್ಬಿರುವ ರೀತಿ ಖುಷಿ ಕೊಟ್ಟಿದೆ.. ನನ್ನ ಮಕ್ಕಳ ಸಾಧನೆ.. ಅವರ ಮಕ್ಕಳ ಆ ತುಂಟತನ ನೋಡುವುದೇ ಖುಷಿ.. ಚಿಕ್ಕಪ್ಪ ಚಿಕ್ಕಪ್ಪ ಎನ್ನುವ ಮೀರಾ, ಮಂಜು, ಗಿರಿ, ಸುಮ, ಸಂಧ್ಯಾ, ಲಕ್ಷ್ಮಿ, ವಿದ್ಯಾ.. ಮಾವ ಎನ್ನುವ ನಾಗೇಂದ್ರ, ಲಕ್ಷ್ಮಿ..   ಮಸ್ತ್ ಮಸ್ತ್.. 

ಹೋಮ ಕಾರ್ಯ ಸೊಗಸಾಗಿತ್ತು.. ಬೆಳಗ್ಗೆ ಬೇಗನೆ ಶುರುವಾಗಿದ್ದರಿಂದ ಹೆಚ್ಚು ಮಂದಿ ಬಂದಿರಲಿಲ್ಲ.. ಭಾನುವಾರ ಅಲ್ಲವೇ.. ಎಲ್ಲರೂ ತಡವಾಗಿ ಎದ್ದು ಬರುವವರಿದ್ದರೂ ಅನ್ಕೊಂಡು ನಾ ಎಲ್ಲರನ್ನು ನೋಡಲು ಕಾಯುತ್ತಾ ಕೂತಿದ್ದೆ.. ಹೋಮ ಹವನಾದಿಗಳು ನೆಡೆದಿದ್ದವು.. ಮಂತ್ರಘೋಷಗಳು ನನಗೆ ಬಲು ಇಷ್ಟ.. ಅಲ್ಲಿಯೇ ಹತ್ತಿರದಲ್ಲಿ ಕೂತಿದ್ದೆ.. ಪುರೋಹಿತರ ಜೊತೆಯಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಮಂತ್ರಗಳನ್ನು ಹೇಳುತ್ತಿದ್ದೆ.. ಏನೋ ಒಂದು ರೀತಿ ಮನಸ್ಸಿಗೆ ಖುಷಿ ನೀಡಿತ್ತು... 

ಹತ್ತುಘಂಟೆ ಕಳೆದಿತ್ತು.. ಒಬ್ಬೊಬ್ಬರಾಗಿ ಬರಲು ಶುರು ಮಾಡಿದರು.. ಮೀರಾಳ ಮದುವೆಗೆ ಮಾತ್ರ ನಾ ಇದ್ದೆ..ಆಮೇಲೆ ನೆಡೆದ ಮದುವೆಗಳನ್ನೆಲ್ಲ ಇಲ್ಲಿಂದಲೇ ನೋಡಿದ್ದು.. ಎಲ್ಲಾ ಜೋಡಿಗಳನ್ನು ನೋಡಿ ಮನಸ್ಸಿಗೆ ಸಂತೋಷವಾಗಿತ್ತು.. 

ಮೀರಾ-ಕುಮಾರ ಕುಟುಂಬ.. ಅವರ ಮುದ್ದು ಮಕ್ಕಳು.. 
ಸುಮಾ-ರಾಘವೇಂದ್ರ-ಮಗು ಮುದ್ದಾದ ಕುಟುಂಬ 
ಲಕ್ಷ್ಮಿ-ಯೋಗಾನಂದ್-ಅವರ ಮುದ್ದಾದ ಮಕ್ಕಳು 
ಗಿರಿ ಒಬ್ಬನೇ ಬಂದಿದ್ದರೂ, ಮುದ್ದಾದ ಮಗು ಮತ್ತು ಮಡದಿಯ ಬಗ್ಗೆ ಅವನ ಮಾತುಗಳು ಇಷ್ಟವಾದವು 
ಮಂಜು-ಸುಮಾ ಮತ್ತು ಆ ಛೋಟಾ ಪುಟಾಣಿ.. 
ನಾಗಲಕ್ಷ್ಮಿ ಮತ್ತು ಮಗು ಸುಂದರ.. ನಾಗೇಶ್ ಬಂದಿರಲಿಲ್ಲ..  
ಸಂಧ್ಯಾ-ಹನುಮೇಶ್ ಸುಂದರ ಜೋಡಿ 
ಕಾರ್ಯಕ್ರಮಕ್ಕೆ ಬರಲಿಲ್ಲವಾದರೂ ವಿದ್ಯಾಳನ್ನೇ ಹೋಲುತ್ತಿದ್ದ ಒಬ್ಬಳು ಅಲ್ಲಿ ಓಡಾಡುತ್ತಿದಳು .. ವಿದ್ಯಾ-ಅರವಿಂದ್ ಜೋಡಿ ಮನೇಲೆ ಇದ್ದರು ಎಂದು ಲಕ್ಷ್ಮಿಯಿಂದ ತಿಳಿಯಿತು.. 
ನಾಗೇಂದ್ರ ಒಬ್ಬನೇ ಬಂದಿದ್ದ.. ಮಗುವಿನ ಬಗ್ಗೆ ಹೇಳಿದ್ದು.. ತನ್ನ ಮಡದಿಯ ಬಗ್ಗೆ ಹೇಳಿದ್ದು ಕೇಳಿದೆ.. 

ಇವರನ್ನೆಲ್ಲಾ ಒಂದೇ ಫ್ರೇಮಿನಲ್ಲಿ ನೋಡಿದ್ದು ಸೂಪರ್ ಇತ್ತು.. 

ಈ ಕಾರ್ಯಕ್ರಮ ನೆಡೆದ ಸ್ಥಳವೂ ಸುಂದರವಾಗಿತ್ತು.. ವಿಶಾಲವಾದ ದೇವಸ್ಥಾನ.. ಓಡಾಡಲು ಬೇಕಾದಷ್ಟು ಜಾಗ.. ಒಂದು ರೀತಿಯಲ್ಲಿ ಆಧುನಿಕತೆಯ ಸೋಗು ಇಲ್ಲದೆ ಇದ್ದರೇ ಹಳ್ಳಿವಾತಾವರಣದಂತೆ ಇದ್ದ ಜಾಗ.. ಅಲ್ಲಿನ ತಾಣವನ್ನು ಒಮ್ಮೆ ನೋಡು.. !!!

ವಿಶಾಲವಾದ ದೇವಾಲಯ 

ಆದಿ ಪೂಜಿತ ಗಣಪ 

ಬೃಹತ್ ರಾಜಗೋಪುರ 

ನಾಗರಕಟ್ಟೆ 

ನನ್ನ ಕುಟುಂಬದಂತೆ ಅರಳಿರುವ ಅಶ್ವಥ್ ವೃಕ್ಷ 

ಅಲ್ಲೊಂದು ಕಲಿಕಾ ಕೇಂದ್ರ

ಗರುಡ ಕಂಬ.. 

ಹೀಗೊಂದು ನೋಟ 
ಅಕ್ಷರಾಭ್ಯಾಸ, ಸತ್ಯನಾರಾಯಣ ಪೂಜೆ ಸಾಂಗೋಪಾಂಗವಾಗಿ ನೆರವೇರಿತು.. ಈ ಕಾರ್ಯಕ್ರಮಗಳೆಲ್ಲ ಕೌಟುಂಬಿಕ ಮಿಲನ ಅಲ್ಲವೇ.. ಬಂದವರೆಲ್ಲ ಬಂಧು ಮಿತ್ರರಜೊತೆಯಲ್ಲಿ ಮಾತು ಮಾತು ಮಾತು.. 

ಬೆಳಗಿನ  ಉಪಹಾರ ರುಚಿಯಾಗಿತ್ತು.. ಊಟ ಭರ್ಜರಿ.. ಎಲ್ಲರೂ ತಾಂಬೂಲ ಪಡೆದು ಹೊರಟಾಗ ಮನಸ್ಸು ಭಾರವಾಗಿತ್ತು.. ಕೆಲವರ ಚಿತ್ರಗಳು ಸಿಕ್ಕಿದವು.. ಕೆಲವರು ಹೊರತು ಬಿಟ್ಟಿದ್ದರು.. ಆದರೂ ಅವರನ್ನೆಲ್ಲ ಒಂದೇ ಕಡೆ ನೋಡಿದ್ದು ಖುಷಿಯಾಗಿತ್ತು.. ಅವರನ್ನೆಲ್ಲ ಮಾತಾಡಿಸಲು ಸಾಧ್ಯವಾಗಲಿಲ್ಲ.. ಆದರೆ ಎಲ್ಲರ ಮನಸ್ಸಿನಲ್ಲಿ ನಾ ಇದ್ದೆ ಎನ್ನುವುದು ನನಗೆ ಗೊತ್ತಿತ್ತು.. 

ಶ್ರೀಕಾಂತ ಮನಸ್ಸಿನಲ್ಲಿ ಅಂದುಕೊಂಡ.. "ರಾಜಾ ಇಲ್ಲಿ ಇದ್ದಿದ್ರೆ.. .. ಛೆ ಎಂಥ ಮಾತು.. ರಾಜಾ ನಮ್ಮೊಳಗೇ ಇದ್ದಾನೆ.. ಅವನು ಎಲ್ಲೂ ಹೋಗಿಲ್ಲ" ಅಂದಾಗ ಮನಸ್ಸಿಗೆ ನೆಮ್ಮದಿ.. 

ನೋಡಪ್ಪ.. ಒಂದಷ್ಟು ಚಿತ್ರಗಳನ್ನು ಕ್ಲಿಕ್ ಮಾಡಿ ನಿನಗೋಸ್ಕರ ತಂದಿದ್ದೇನೆ.. ನೋಡು ಎನ್ನುತ್ತಾ 9886155232 ನಂಬರ್ ಇರುವ ಮೊಬೈಲಿನಲ್ಲಿ ಚಿತ್ರಗಳನ್ನು ತೋರಿಸುತ್ತಾ ಹೋದ.. ಆ ಚಿತ್ರಗಳು ನಿಮಗಾಗಿ ಇಲ್ಲಿವೆ.. 



















ಎಲ್ಲಾ ಚಿತ್ರಗಳನ್ನು ನೋಡಿ ಇಬ್ಬರೂ ಮತ್ತೊಮ್ಮೆ ಸಂತೋಷ ಪಟ್ಟರು.. ರಾಜ ನಿನ್ನ ಭೂಲೋಕ ಪಯಣ ಸೂಪರ್ ಕಣೋ.. ಈ ರೀತಿಯ ಪಯಣ ನೆಡೆಯುತ್ತಲೇ ಇರಲಿ.. ಹಾಗೆ ನಿನ್ನ ಕುಟುಂಬದಲ್ಲಿ ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳು ಆಗುತ್ತಲೇ ಇರಲಿ.. ಶುಭವಾಗಲಿ.. !!!

ಹಾಗೆ ಇಬ್ಬರೂ ನೆಡೆಯುತ್ತಾ ನೆಡೆಯುತ್ತಾ ತಿರುವಿನಲ್ಲಿ ಚುಕ್ಕೆಯಾಗಿ ಗಗನದಲ್ಲಿ ತಾರೆಗಳಾದರು.. !!!

Sunday, April 8, 2018

ಮೈ ನೇಮ್ ಈಸ್ ರಾಜ್ ರಾಜ್ ರಾಜ

ಸುಮಾರು ಹನ್ನೆರಡು ವರ್ಷದ ಹಿಂದೆ.. ಉದಯ ಟಿವಿಯಲ್ಲಿ ಮೈತ್ರಿ ಎನ್ನುವ ನಿರೂಪಕಿ ಪ್ರವಾಸಿ ತಾಣವನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಸಿಗಂದೂರು ಕ್ಷೇತ್ರವನ್ನು ಪರಿಚಯುಸುತ್ತಿದ್ದರು.. ಲಾಂಜ್ ನಲ್ಲಿ ಹೋಗೋದು.. ಅದ್ಭುತ ಅನುಭವ ಕೊಡುವ ಬಗ್ಗೆ ಹೇಳುತ್ತಿದ್ದರು.. ಮೊದಲಿಗೆ ಅವರ ನಿರೂಪಣೆ ಆ ಜಾಗಕ್ಕೆ ಹೋಗಲೇ ಬೇಕು ಅನ್ನುವಷ್ಟು ಸ್ಫೂರ್ತಿ ಕೊಡುತ್ತಿತ್ತು.


ಪಕ್ಕದಲ್ಲಿ ರಾಜ ಕೂತಿದ್ದ......

ಲೋ ರಾಜ (ನನ್ನ ಮಾವನನ್ನು ಕರೆಯುತ್ತಿದ್ದ ಪರಿ!.. ಆ ಊರನ್ನು ನೋಡಬೇಕು ಕಣಲೇ.. !

"ಸರಿ.. ಈ ಎರಡನೇ ಶನಿವಾರ ರಜೆ ಇದೆ.. ಬುಕ್ ಮಾಡೋಣ... ಶಿವಮೊಗ್ಗದಲ್ಲಿ ನನ್ನ ಸ್ನೇಹಿತನ ಕ್ಯಾಬ್ ಇದೆ.. ಫೋನ್ ಮಾಡ್ತೀನಿ" ಅಂದ.. 

ಕೂತು ಕೂತಲ್ಲೇ ಕಾರ್ಯಕ್ರಮ ಸಿದ್ಧವಾಯಿತು.... 

ಸರಿ ಮಡದಿ ಮಗಳು ಮತ್ತೆ ರಾಜನ ಜೊತೆ ಶಿವಮೊಗ್ಗಕ್ಕೆ ಹೊರಟೇಬಿಟ್ಟೆವು... ಶುಕ್ರವಾರ ರಾತ್ರಿ.. 

ಶನಿವಾರ ಸ್ನಾನ ಸಂಧ್ಯಾವಂದನೆ ಎಲ್ಲಾ ಮುಗಿಸಿ.. ಹೊರಟಿದ್ದು ಬೆಳಿಗ್ಗೆ ಏಳು ಘಂಟೆಗೆ.. 

ವರದಹಳ್ಳಿ.. ಸಿಗಂದೂರು.. ಕೊಲ್ಲೂರು.. ಶಿವಮೊಗ್ಗ ಎನ್ನುವ ಪಟ್ಟಿ ಸಿದ್ಧವಾಗಿತ್ತು.. 

ಪುಟ್ಟಣ್ಣ ಕಣಗಾಲ್ ಅವರ ಅಮೃತಘಳಿಗೆಯ "ಹಿಂದೂಸ್ಥಾನವೂ ಎಂದೂ ಮರೆಯದ" ಹಾಡನ್ನು ನೋಡಿದಾಗಿಂದ ಆ ಪುಣ್ಯಕ್ಷೇತ್ರವನ್ನು ನೋಡುವ ಬಸುರಿ ಬಯಕೆ ಹೊತ್ತಿದ್ದ ನನಗೆ.. ಆ ಆಸೆ ಈಡೇರುವ ಖುಷಿ.. 

ಶ್ರೀಧರ ತೀರ್ಥದಲ್ಲಿ ಮೋರೆ ತೊಳೆದು... ೨೨೫ ಮೆಟ್ಟಿಲು ಹತ್ತಿ ಹೋದಾಗ ಕಂಡಿದ್ದು ಶ್ರೀಧರ  
ಸ್ವಾಮಿಗಳ ಆಶ್ರಮ.. ಮನಸ್ಸು ಹಕ್ಕಿಯ ಹಾಗೆ ಹಾರಾಡಿತ್ತು .. ಅಲ್ಲಿಂದ ಸ್ವಲ್ಪ ಮೇಲೆ ಹತ್ತಿದರೆ ಧರ್ಮಧ್ವಜ ಇರುವ ಸ್ಥಳವಿತ್ತು.. ಸುಮಾರು ಅರ್ಧ ಕಿಮೀಗಳಷ್ಟು ದೂರ ಅಷ್ಟೇ.. ಆ ಜಾಗವನ್ನು ನೋಡಬೇಕು ಅನ್ನುವ ಆಸೆ ಇತ್ತು.. ಆದರೆ ನನ್ನ ಜೊತೆ ಇದ್ದ ಮಡದಿ, ಮಗಳು.. ಮತ್ತು ರಾಜ.. ಹೋಗಲೇ ಬೇಡ.. ಹೊತ್ತಾಗುತ್ತೆ. ಸಿಗಂದೂರು ಲಾಂಜ್ ಮಿಸ್ ಆಗುತ್ತೆ ಅಂದ.. 

ಲಾಂಜ್ ಅನುಭವ ಬೇಕಿತ್ತು.. ಶ್ರೀಧರ ಸ್ವಾಮಿಗಳಿಗೆ ಅಲ್ಲಿಯೇ ನಮಿಸಿ ಮತ್ತೊಮ್ಮೆ ಬರುವೆ ಎಂದು ಸಿಗಂದೂರಿನ ಕಡೆ ಹೊರಟೆವು.. ನಾವು ಬಂದಿದ್ದ ಮಾರುತಿ ವ್ಯಾನ್ ರಸ್ತೆಯಲ್ಲಿ ಸೊಗಸಾಗಿ ನುಗ್ಗುತ್ತಿತ್ತು.. 

ನಮ್ಮ ಡ್ರೈವರ್ "ನೋಡಿ ಸರ್ ಹೊಳೆ ಬಾಗಿಲು ಬಂತು" ಅಂದ.. 

"ಬಾಗಿಲಾ? ಎಲ್ಲಿದೇರಿ ಬಾಗಿಲು.. ಹೊಳೆಗೆಂತ ಬಾಗಿಲು" ಅಂತ ತಮಾಷೆ ಮಾಡಿದೆ.. 

"ಸರ್ ಇದು ಶರಾವತಿ ನದಿಗೆ ಅಣೆಕಟ್ಟನ್ನು ಕಟ್ಟಿದಾಗ ಬಂದ ಹಿನ್ನೀರು ಈ ಪ್ರದೇಶವನ್ನು ಮುಳುಗಡೆ ಮಾಡಿತ್ತು.. ಆಗ ಸಿಗಂದೂರಿಗೂ ಮತ್ತು ಈ ಪ್ರದೇಶಕ್ಕೂ ಸೇತುವೆ ಅಂದರೆ ಈ ಲಾಂಜುಗಳೇ.... "

ಆಗಲೇ ಜನ ಜಮಾಯಿಸಿದ್ದರು.. ಬಸ್ಸುಗಳು.. ಕಾರುಗಳು, ಬೈಕು, ಸೈಕ್ಲಲ್ಲುಗಳು ನಿಂತಿದ್ದವು.. ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ.. ಉದಯ ಟಿವಿಯ ಕಾರ್ಯಕ್ರಮದಲ್ಲಿ ಬಸ್ಸು, ಕಾರು ಎಲ್ಲವನ್ನು ಸಾಗಿಸುತ್ತಾರೆ ಜನಗಳ ಜೊತೆಯಲ್ಲಿ ಅಂತ ತೋರಿಸಿದ್ದು ನೋಡಿದ್ದೇ.. ಈಗ ನನಗೆ ಕುತೂಹಲ ಇತ್ತು ಹೇಗಿರುತ್ತೆ, ಹೇಗೆ ನುಗ್ಗಿಸುತ್ತಾರೆ ಅಂತ.. 

ದೂರದಲ್ಲಿ ಬರುತ್ತಿದ್ದ ಲಾಂಜ್ ಹತ್ತಿರವಾಗುತ್ತಿತ್ತು.. ಅನತಿ ಕ್ಷಣದಲ್ಲಿ ನಮ್ಮ ಮುಂದೆ ಮನೆಯ ತರಹವೇ ಇದ್ದ ಲಾಂಜ್ ಬಂದು ನಿಂತಿತ್ತು.. 

ಬಸ್ಸುಗಳು, ಕಾರುಗಳು, ಜನರೂ ಎಲ್ಲವನ್ನು ತನ್ನ ಒಡಲಲ್ಲಿ ತುಂಬಿಸಿಕೊಂಡು ಹೊರಟಿತ್ತು.. ಪ್ರತಿಯೊಬ್ಬರಿಂದ ಒಂದು ರೂಪಾಯಿ ತೆಗೆದುಕೊಂಡು ಚೀಟಿ ಕೊಟ್ಟರು.. ನಾವೆಲ್ಲರೂ ಕಾರಿಂದ ಇಳಿದು ಹೊರಗೆ ಬಂದು ಹಿನೀರನ್ನು ನೋಡುತ್ತಾ ನಿಂತೆವು.. 

ಸುಮಾರು ಹತ್ತು ನಿಮಿಷಗಳ ಪಯಣ.. ಜೀವನಕ್ಕೆ ಒಂದು ಅದ್ಭುತ ಅನುಭವ ಕೊಡುವ ತಾಣವಾಗಿತ್ತು ಈ ಪಯಣ.. 

ಈ ಬದಿಯಿಂದ ಆ ಬದಿಗೆ ಹೋಗಿ ಇಳಿದು.. ಅಲ್ಲಿಂದ ಆ ಊರಿನ ಜೀಪನ್ನು ಹತ್ತಿ ದೇವಸ್ಥಾನಕ್ಕೆ ಬಂದೆವು.. ಸುಮಾರು ಒಂದೂವರೆ ಅಥವಾ ಎರಡು ಕಿಮೀಗಳ ದೂರ.. 

ಸಿಗಂದೂರನ್ನು ತನ್ನ ಅಭಯ ಹಸ್ತದಿಂದ ಕಾಪಾಡುತ್ತಿರುವ ಶ್ರೀ ಚೌಡೇಶ್ವರಿಯ ದರ್ಶನ ಮಾಡಿದೆವು.. ದೇವಿಯ ದರ್ಶನ  ಮಾಡಿ ನಮ್ಮ ನಮ್ಮ ಕೋರಿಕೆ ಸಲ್ಲಿಸಿ.. ಕೊಲ್ಲೂರಿನ ಕಡೆಗೆ ಹೊರಟೆವು.. 

ಕೊಲ್ಲೂರಿನ ದರ್ಶನ ಮೊದಲ ಬಾರಿಗೆ.. ರಂಗನಾಯಕಿ ಚಿತ್ರದಲ್ಲಿ "ಜೈ ಜಗದಂಬೆ" ಹಾಡಿನಲ್ಲಿನೋಡಿದ್ದು .. ಇಲ್ಲಿ ಸಾಕ್ಷಾತ್ಕಾರವಾಗಿತ್ತು.. ತಾಯಿ  ಮೂಕಾಂಬಿಕೆಯ ದರ್ಶನ.. ಸ್ವಲ್ಪ ಹೊತ್ತು ಅಲ್ಲೇ ಜೋತು ಮಾಡಿದ ಜಪ... ಮನಸ್ಸಿಗೆ ತಂಪಾದ ಅನುಭವ ನೀಡಿತ್ತು.. 

ಮತ್ತೆ ಶಿವಮೊಗ್ಗೆಗೆ ಬಂದು.. ಊಟ ಮಾಡಿ.. ಬಸ್ಸು ಹತ್ತಿದಾಗ  ಲೋಕವೂ ಸುಂದರವಾಗಿ ಕಾಣತೊಡಗಿತ್ತು.. 

ಈ ಲೇಖನ ಅಷ್ಟು ವರ್ಷ ಆದ ಮೇಲೆ ಬರೆಯುವ ಕಾರಣವೆಂದರೆ.. ನನ್ನ ಸೋದರ ಮಾವ ರಾಜ.. ಸುಮ್ಮನೆ ಒಂದು ಕಾರ್ಯಕ್ರಮ ಹೇಳಿದರೆ ಸಾಕು.. ಇಲ್ಲ.. ಆಗೋಲ್ಲ.. ನೋಡೋಣ ಅನ್ನುವ ಹಾರಿಕೆಯ ಉತ್ತರವೇ ಇರುತ್ತಿರಲಿಲ್ಲ.. 

ಸರಿ ಕಣೋ ನೆಡೆಯೋ.. ಅನ್ನುವ ಉತ್ತರವೇ ಸದಾ ಅವನಿಂದ.. !

ನನ್ನ ಪ್ರವಾಸದ ಹುಚ್ಚಿನ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದ್ದು ಅವನೇ.. ದಾರಿಯುದ್ದಕ್ಕೂ ತಮಾಷೆ ಮಾತುಗಳು.. ಹಾಸ್ಯ.. ಅವನಿಂದ ನನಗೆ ಬೀಳುತ್ತಿದ್ದ ಪ್ರೀತಿಯ ಒದೆ.. ಹಾ ಹೌದು ಒದೆ.. ಅವನನ್ನು ಚೆನ್ನಾಗಿ ರೇಗಿಸುತ್ತಿದ್ದೆ.. ಕೋಪ ಬರುತ್ತಿರಲಿಲ್ಲ.. ಆದರೆ ಅವನ ನಗು ಮತ್ತು ಅವನು ಕೊಡುತ್ತಿದ್ದ ಪ್ರೀತಿಯ ಒದೆಗಳು.. ಅದಕ್ಕಿಂತ ಆತನ ತೂಗುದೀಪ ಶ್ರೀನಿವಾಸ ನಗು..ಹೌದು ಅವನ ನಗು ನನ್ನ ಕಿವಿಯಲ್ಲಿ ಯಾವಾಗಲೂ ಪ್ರತಿಧ್ವನಿಯಾಗುತ್ತಿರುತ್ತದೆ.. 

ನಮ್ಮನ್ನು ಅವನ ನೆನಪಲ್ಲಿ ಬಿಟ್ಟು ಆನಂದಲೋಕಕ್ಕೆ ತೆರಳಿ ಹತ್ತು ವರ್ಷಗಳಾಗುತ್ತಿವೆ.. ಅವನು ಇಲ್ಲ ಅನ್ನುವ  ಮಾತೆ ನನ್ನೊಳಗೆ ಬರುತ್ತಿಲ್ಲ.. ಕಾರಣ ಪ್ರತಿಯೊಂದು ದಿನ.. ಪ್ರತಿಯೊಂದು ಕ್ಷಣವೂ ಅವನ ನೆನಪು ಒಂದಲ್ಲ ಒಂದು ರೀತಿ ಕಾಡುತ್ತಿರುತ್ತಲೇ  ಇರುತ್ತದೆ.  ಅಣ್ಣಾವ್ರ ಯಾವುದೇ ಚಿತ್ರಗಳು, ಹಾಡುಗಳು, ಬಾಲಣ್ಣನ ಯಾವುದೇ ಚಿತ್ರದ ಸಂಭಾಷಣೆ.. ಅವನ ಫೇವರಿಟ್ ಸುಜುಕಿ ಸಮುರೈ.. ಅಮಿತಾಬ್ ಚಿತ್ರಗಳು.. ಹೀಗೆ ಪ್ರತಿ ಕ್ಷಣವೂ ಅವನ ಇರುವಿಕೆ ನನ್ನ ಜೊತೆಯಲ್ಲಿ ಇದ್ದೆ ಇದೆ.. 

ಇದು ನನ್ನೊಬ್ಬನೆ ಮಾತು ಮಾತ್ರವಲ್ಲ.. ಅವನನ್ನು ಒಂದು ಕ್ಷಣ ಮಾತಾಡಿಸಿದ ಪ್ರತಿಯೊಬ್ಬರ ಮಾತು ಇದೆ.. 

ರಾಜ ಇಂದು ನಿನ್ನ ಜನುಮದಿನ.. ನೀನಿಲ್ಲ ಅನ್ನುವ ಮಾತೆ ಇಲ್ಲ. ನೀ ನನ್ನೊಳಗೆ ಸದಾ ಇರುವೆ.. !