Friday, April 8, 2016

ಮೂರು ಮೂರು ಧಮಾಕಗಳು----ಹೊಸ ವರ್ಷದ ಸಂಭ್ರಮ!!!

ದೇವರು ಕೊಡುವಾಗ ಚಪ್ಪರ ತೂತಾಗುವ ಹಾಗೆ ಕೊಡುತ್ತಾನೆ ಎನ್ನುತ್ತದೆ ಗಾದೆ.

ಇಂದು ಒಂದು ರೀತಿಯಲ್ಲಿ ಹಾಗೆಯೇ.

ನನ್ನ ಆತ್ಮೀಯ ಗೆಳೆಯ, ಮಾವ, ನನ್ನೆಲ್ಲಾ ತರಲೆಗಳ ಸಂಗಾತಿ..  ರಾಜ ಹುಟ್ಟಿದ ದಿನ.
ಸವಿತಾ, ನನ್ನ ಬಾಳ ಗೆಳತಿಯಾಗಿ ಬಂದು ಹದಿನಾಲ್ಕು ವನವಾಸದಂಥಹ ವರ್ಷಗಳನ್ನು ಕಳೆದ ಸಂಭ್ರಮ :-)
ದಿನಸೂಚಿಯನ್ನು ಒಮ್ಮೆ ಮಗುಚಿ ಹಾಕಲು ಹೋದರೆ.. ಲೋ ಶ್ರೀ.. ಇದೆ ಕಡೆ ಪುಟ.. ಹೊಸ ಪಂಚಾಗ ಇಂದಿನಿಂದ ಶುರು ಕಣೋ ಎಂದಿತು ಪಂಚಾಗ.. ಹೊಸ ವರ್ಷದ ಸಂಭ್ರಮ.. !

ಹೀಗೆ ಮೂರು ಮೂರು ಧಮಾಕಗಳು ಸಾಲುಗಟ್ಟಿ ನಿಂತಿರುವಾಗ, ಮನಸ್ಸಿಗೆ ಅನ್ನಿಸಿತು, ರಾಜನ ಬಗ್ಗೆ ಬರೆದು ಬಹಳ ದಿನ ಆಗಿದೆ, ಸರಿ ಹೊಸ ವರ್ಷದ ಸಂಭ್ರಮದಲ್ಲಿ ಮತ್ತೆ ಅವನ ಲೋಕಕ್ಕೆ ಹೆಜ್ಜೆ ಇಡೋಣ ಎನ್ನಿಸಿ ಈ ಲೇಖನ, ನನ್ನ ಪ್ರೀತಿಯ ಮಾವ ರಾಜನಿಗೆ ಅರ್ಪಿತ!!!

*****

ಮನಸ್ಸು ಕದಡಿದ ಜೇನು ಗೂಡಾಗಿತ್ತು. ಬೈಕ್ ಒಂದು ಭಾನುವಾರ ತಿಂಡಿ ತಿಂದು, ಹಾಗೆ ಸುತ್ತಾಡಿ ಬರೋಣ ಅಂತ ಹೊರಟೆ.
ನನ್ನ ಬೈಕಿಗೆ ಯಾವತ್ತೂ ಹೊಟ್ಟೆ ತುಂಬಾ ಊಟ ಹಾಕಿದ್ದಿಲ್ಲ, ಆದರೆ ಅದರ ಹಿಂದಿನ ದಿನ ಯಾಕೋ ತಲೆ ಕೆಟ್ಟು ಫುಲ್ ಟ್ಯಾಂಕ್ ಮಾಡಿಸಿದ್ದೆ,

ಸರಿ ಹೊರಟೆ..  ಮನೆಯಿಂದ ಒಂದೆರಡು ಕಿಮಿಗಳು ಬಂದ ಮೇಲೆ, ಯಾಕೋ ನನ್ನ ಮನಸ್ಸಿನ ಬ್ಯಾಟರಿ ಚಾರ್ಜ್ ಕಡಿಮೆ ಇದೆ ಅನ್ನಿಸಿತು. ಸರಿ ನನ್ನ ಬ್ಯಾಟರಿ ಚಾರ್ಜರ್ ಹಾಸನದಲ್ಲಿ ಇತ್ತು (ನನ್ನ ಸೋದರತ್ತೆ ಮಗ ಶ್ರೀ ನಾಗಭೂಷಣ). ಇವನ ಹತ್ತಿರ ಒಂದು ನಿಮಿಷ ಮಾತಾಡಿದರೂ ನನ್ನ ಮನಸ್ಸು ಹಗುರಾಗುತ್ತಿತ್ತು. ಬೇರೆ ಯೋಚನೆಯೇ ಇಲ್ಲಾ.. ಬೈಕ್ ನಲ್ಲಿಯೇ ಹಾಸನಕ್ಕೆ ಹೋಗೋಣ ಅನ್ನಿಸಿತು. ಮನೆಗೆ ಕರೆ ಮಾಡಿ ಹೇಳಲು ಮನಸ್ಸು ಬರಲಿಲ್ಲ (ಕಾರಣ, ಹೋಗಲು ಬಿಡುತ್ತಿರಲಿಲ್ಲ :-) )

ಜಾಲಹಳ್ಳಿ ಕ್ರಾಸ್ ದಾಟಿದಾಗ, ತಕ್ಷಣ ಅನ್ನಿಸಿತು, ಅರೆ ರಾಜ ಇಲ್ಲಿಯೇ ಅಲ್ಲವೇ ಇರುವುದು.. ತಕ್ಷಣ ಅವನ ಜಂಗಮವಾಣಿಗೆ ಕರೆ ಮಾಡಿದೆ

"ಲೋ ಗುರು.. ಹಾಸನಕ್ಕೆ ಹೋಗ್ತಾ ಇದ್ದೀನಿ ಬರ್ತೀಯ" (ನಮ್ಮಿಬ್ಬರ ಸಂಭಾಷಣೆ ಯಾವಾಗಲೂ ಹೀಗೆಯೇ.. ಪೀಠಿಕೆ ಏನೂ ಇಲ್ಲಾ ಸೀದಾ ವಿಷಯಕ್ಕೆ ಡೈವ್)
"ಬೆಳಿಗ್ಗೆ ನಿನ್ನೆ ತಿಪಟೂರಿಗೆ ಹೋಗಿದ್ದೆ, ಇವಾಗ ನೆಲಮಂಗಲ ಹತ್ತಿರ ಇದ್ದೀನಿ.. ನೀ ಎಲ್ಲಿ ನಿಂತಿದ್ದೀಯೋ ಅಲ್ಲೇ ಇರು, ಅರ್ಧ
ಘಂಟೆ ಬರ್ತೀನಿ.. "

ಇದು ನಮ್ಮಿಬ್ಬರ ಮಧ್ಯೆ ಇದ್ದ ಸಂಬಂಧ.. ಯಾಕೆ ಅಂತ ಅವ ಕೇಳಲಿಲ್ಲ, ಯಾಕೆ ಅಂತ ನಾ ಹೇಳಲಿಲ್ಲ.

ಅರ್ಧ ಘಂಟೆ ಕಳೆಯಿತು.. ಹಲ್ಲು ಬಿಡುತ್ತಾ ದೇಶಾವರಿ ನಗೆ ಬಿಸಾಕುತ್ತಾ ಬಂದ..

ನಾ ಓಡಿಸ್ಲಾ ಅಂದ..

ಬೇಡ ಗುರು ಸ್ವಲ್ಪ ದೂರ ಓಡಿಸ್ತೀನಿ.. ಆಮೇಲೆ ನೀ ತಗೋ ಅಂದೇ

ಮುಂದಿನ ನಾಲ್ಕು ಘಂಟೆಗಳು.. ಆ ಬಿರು ಬಿಸಿಲಿನಲ್ಲಿ ಹಾಸನದ ಹಾದಿಯಲ್ಲಿ ನಗು, ನಗು ಮಧ್ಯೆ ಕಾಫಿ ತಿಂಡಿಗೆ ವಿರಾಮ.. ಸೊಗಸಾಗಿತ್ತು.

ಹಾಸನದಲ್ಲಿ ಅವನ ಅಣ್ಣನ  (ಗೋಪಾಲ ಮಾವನ ಮನೆ) ಮನೆಗೆ ಹೋಗಿ, ಕಾಫಿ ಕುಡಿದು ಕೂತಿದ್ದೆವು. ರಾಜ ಕಣ್ಣಿನಲ್ಲಿಯೇ ಸನ್ನೆ ಮಾಡಿದ.. "ನೀ ನಿನ್ನ ಕೆಲಸ ಮುಗಿಸಿಕೊಂಡು ಬಾ, ನಾ ಇಲ್ಲೇ ಇರ್ತೀನಿ" ಕಣ್ಣಿನ ಭಾಷೆ ಅರಿವಾಯಿತು.

ಸರಿ ನಾ ಹೊರಟೆ..

(ಇಲ್ಲಿ ಒಂದು ಚಿಕ್ಕ ತಿರುವು..
ನಾ ನನ್ನ ಬ್ಯಾಟರಿ ಚಾರ್ಜರ್ ಶ್ರೀ ನಾಗಭೂಷಣನ ಮನೆಗೆ ಹೋದೆ.. ಅಲ್ಲಿ ಅವನು ಕೆಲವು ವ್ಯಕ್ತಿಗಳ ಜೊತೆಯಲ್ಲಿ ಮಾತಾಡುತ್ತಿದ್ದ, ನಾ ಸುಮಾರು ಒಂದು ಘಂಟೆ ಕಾದೆ.. ಸುಮಾರು ರಾತ್ರಿ ಎಂಟು ಘಂಟೆಗೆ "ಶ್ರೀಕಾಂತಾ ಬಾರೋ " ಅಂದ.

ಒಳಗೆ ಹೋದೆ, ಒಂದಷ್ಟು ಮಾತು.. ನಾ ನನ್ನ ಸಂಕಷ್ಟಗಳನ್ನು ಹೇಳಿಕೊಳ್ಳಲಿಲ್ಲ, ಅವನು ಕೇಳಲಿಲ್ಲ.. ಅದು ಇದು ಮಾತಾಡಿದೆವು, ಮನಸ್ಸನ್ನು ಹೇಗೆ ಗೆಲ್ಲಬೇಕು ಎಂದು ಒಂದೆರಡು ಮಹಾಭಾರತದ ಕಥೆಗಳನ್ನು ಹೇಳಿದ.. ಅರ್ಧಘಂಟೆ ಆಯಿತು.. ಅಷ್ಟರಲ್ಲಿ ಇನ್ನಷ್ಟು ಮಂದಿ ಬಂದರು.. ನಾ ಹೋಗಿಬರುತ್ತೇನೆ ಎಂದು ಹೇಳಿ ಅವನ ಆಶೀರ್ವಾದ ಪಡೆದು ಹೊರಟೆ. )

ಒಂಭತ್ತು ಘಂಟೆ ರಾತ್ರಿ.. ಊಟ ಮಾಡಿ.. ಹೊರಡೋಕೆ ಸಿದ್ಧವಾಗಿದ್ದೆವು.. ಆಗ ರಾಜ.. ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಹೋಗೋಣ ಅಂದ..

ಸರಿ.. ಬಿರು ಬಿಸಿಲಿನಲ್ಲಿ ಬೈಕ್ ನಲ್ಲಿ ಬಂದದ್ದು ನಮಗೂ ಆಯಾಸವಾಗಿತ್ತು.. ದೂಸ್ರ ಮಾತಾಡದೆ ನಿದ್ರಾದೇವಿಗೆ ಶರಣಾದೆವು..
"ಲೋ.. ಎದ್ದೇಳೋ..ನಾಲ್ಕು ಘಂಟೆ ಆಯಿತು.. "..

ಸರಿ ಅತ್ತೆ ಮಾಡಿಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು.. ನಾನು ರಾಜ ಮತ್ತೆ ಬೆಂಗಳೂರಿನ ದಾರಿ ಹಿಡಿದೆವು ಬೈಕ್ ನಲ್ಲಿ.

ಬೆಳಗಿನ ಚಳಿ, ಬಿಸಿ ಬಿಸಿ ಕಾಫಿ ಹೊಟ್ಟೆಯೊಳಗೆ ಹೋಗಿದ್ದು ಸ್ವಲ್ಪ ಸಮಧಾನ ನೀಡಿತ್ತು...

ಮುಂದಿನ ನಾಲ್ಕು ಘಂಟೆಗಳು... ಸುಂದರ ಪಯಣ.. ಬೆಳಗಿನ ಮಂಜು, ಸೂರ್ಯನ ಹಿತಮಿತ ಕಿರಣಗಳು.. ಬೆಳ್ಳೂರು ಕ್ರಾಸ್ ಹತ್ತಿರ ಬಿಸಿ ಬಿಸಿ ಇಡ್ಲಿ ವಡೆ ಕಾಫಿ.. ಆಹಾ.. ಮನಸ್ಸು ಹಕ್ಕಿಯ ಹಾಗೆ ಹಾಗಿತ್ತು..

ತುಮಕೂರು ದಾಸರಹಳ್ಳಿಯ ಹತ್ತಿರ ಅವನನ್ನು ಇಳಿಸಿ.. ನಾ ಸೀದ ಮನೆಗೆ ಬಂದೆ..

ಬೈಕ್ ನಿಲ್ಲಿಸಿದ ತಕ್ಷಣ.. ಮಂಗಳಾರತಿ, ಪ್ರಸಾದ ಎರಡು ಸಿಕ್ಕಿತು ಅಮ್ಮ ಅಪ್ಪ ಮತ್ತು ನನ್ನ ಮಡದಿಯಿಂದ.. ಯಥಾ ಪ್ರಕಾರ ಇರುವ ಒಂದಷ್ಟು ಹಲ್ಲುಗಳನ್ನು ತೋರಿಸಿ.. ರಾಜನ ಜೊತೆ ಹೋಗಿದ್ದೆ ನಾಗಭೂಷಣನ ಮನೆಗೆ ಎಂದೇ..

ಹೇಳಿ ಹೊಗೋದಲ್ವ ಅಂತ ಇನ್ನೊಂದಷ್ಟು ಸಿಕ್ಕಿತು.. ಮತ್ತೆ ದಂತ ಪಂಕ್ತಿಗಳ ಪ್ರದರ್ಶನ.

ಇಲ್ಲಿ ರಾಜನ ಮಗುವಿನಂಥ ಮನಸ್ಸಿನ ಬಗ್ಗೆ ಹೇಳಬೇಕೆಂದರೆ, ಹಿಂದಿನ ದಿನವಷ್ಟೇ ತಿಪಟೂರಿನ ತನಕ ಬೈಕ್ ನಲ್ಲಿ ಹೋಗಿ ಬೆಳಿಗ್ಗೆ ಬರ್ತಾ ಇದ್ದವನು, ನಾ ಹಾಸನಕ್ಕೆ ಹೋಗುತ್ತಿದ್ದೇನೆ ಬಾ ಎಂದಾಗ ಅರೆ ಕ್ಷಣ ಯೋಚನೆ ಮಾಡದೆ.. ಬಂದದ್ದು
ವ್ಯಾವಹಾರಿಕ ಪ್ರಪಂಚದಲ್ಲಿ ತನಗೆ ಏನು ಲಾಭ ಎಂದು ಯೋಚಿಸದೆ ಬರಿ ನನಗೋಸ್ಕರ ಬಂದದ್ದು, ಯಾಕೆ ಎಂದು ಕೇಳದೆ, ನಾ ಹೇಳುವ ತನಕ ಒಂದು ಪ್ರಶ್ನೆ ಕೇಳದೆ ೩೮೦ ಕಿಮಿ ಬೈಕ್ ನಲ್ಲಿ ಬಂದದ್ದು, ತಿಂಡಿ ಊಟಕ್ಕೆ ನಾ ಕೊಡುತ್ತೀನಿ ಎಂದರು.. ಲೇ ಸುಮ್ಮನಿರೋ ನಾ ಕಾಣದ ದುಡ್ಡಾ ಎಂದು ಬಯ್ದು ಸುಮ್ಮನಿರಿಸಿದ.

ಹೀಗೆ ಅವನ ಇಡಿ ವ್ಯಕ್ತಿತ್ವ ಚಿತ್ರಣ ಒಮ್ಮೆಗೆ ಸಿಗಲಾರದು, ಬಿಡಿ ಬಿಡಿಯಾಗಿ ಬಿಡಿಸಿ ನೋಡಿದಾಗ ಹಲಸಿನ ಹಣ್ಣು ಬಿಡಿಸಿ ಹಣ್ಣನ್ನು ತಿಂದ ಅನುಭವ ಸಿಗುತ್ತದೆ.

ಅವನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅಥವಾ ಅವನ ಮಗುವಿನಂಥಹ ಮನಸ್ಸಿಗೆ ಸಿಗಬೇಕಾದ ಬೆಲೆ ಸಿಗದೇ.. ಈ ಇಹಲೋಕವನ್ನು ಬಿಟ್ಟು ಹೋದ ಎಂಬುದೇ ಸದಾ ನನ್ನ ಮನಸ್ಸಿಗೆ ಬರುವ ಮಾತುಗಳು.

ಮಾನಸ ಸರೋವರದಂತಹ ಅವನ ವ್ಯಕ್ತಿತ್ವ ಇನ್ನೂ ನಮ್ಮ ಜೊತೆ ಇರಬೇಕಿತ್ತು ಎಂದು ಸದಾ ಹಂಬಲಿಸುತ್ತೆ ನನ್ನ ಮನಸ್ಸು.

ಅವನ ಬಗ್ಗೆ ಬರೆಯಬೇಕು ಎನ್ನಿಸಿತು.. ಅವನ ಹುಟ್ಟು ಹಬ್ಬಕ್ಕೆ ಈ ಲೇಖನ ಅರ್ಪಿತ..

ರಾಜ ನಿನ್ನ ಆಶೀರ್ವಾದ ಸದಾ ಇರಲಿ.. ನಮ್ಮ ಎಲ್ಲ ಬಂಧು ವರ್ಗದವರ ಹಾಗೆ, ನಾನು ಸವಿತಾ ಮತ್ತು ಶೀತಲ್ ನಿನ್ನನ್ನು ನೆನೆಯದ ದಿನವಿಲ್ಲ.. ನೀ ನಮ್ಮ ಮನೆ ಮನದಲ್ಲಿ ಸದಾ ನೆಲೆ ನಿಂತಿರುವ ಆತ್ಮ ಬಂಧು..

ಹುಟ್ಟು ಹಬ್ಬದ ಶುಭಾಶಯಗಳು.. ಜೊತೆಯಲ್ಲಿ ನನ್ನ ಸವಿತಾಳ ೧೪ನೆ ವರ್ಷ.. ಜೊತೆಯಾಗಿ ಹೆಜ್ಜೆ ಹಾಕಲು ಶುರುಮಾಡಿ.. ನಿನ್ನ ಆಶೀರ್ವಾದ ಇರಲಿ ತಣ್ಣಗೆ ಸದಾ ನಮ್ಮ ಮೇಲೆ..