Saturday, April 8, 2017

ರಾಜ ನೀ ಅಜರಾಮರ!!!

ಮದುವೆ ಆದ ಮೇಲೆ.. ನನ್ನವರು ನನ್ನ ಜೊತೆ ಹೆಚ್ಚು ಕಾಲ ಕಳೆಯಬೇಕು.. ಹೊರಗೆ ಹೊರಟಾಗ ನಾವಿಬ್ಬರೇ ಇರಬೇಕು.. ಅಲ್ಲಿ ನಮಗೆ ಖಾಸಗಿ ವೇಳೆ ಬೇಕು ಹೀಗೆಂದು ಆಸೆ ಪಡುವ ದಂಪತಿಗಳು ಸಾಮಾನ್ಯ ಇರುತ್ತಾರೆ.. ಅದು ಮದುವೆ ಆದ ಹೊಸತರಲ್ಲಿ.

ಇದಕ್ಕೆ ತದ್ವಿರುದ್ಧ ಅಂದರೆ.. ದಂಪತಿಗಳಿಗೆ ನೆಂಟರಿಷ್ಟರು ಎರಡು ಕಡೆಯ ನೆಂಟರು ಪರಿಚಯವಿದ್ದರೆ.. ಅದೊಂದು ಬೊಂಬಾಟ್ ವಿಷಯವಾಗಿರುತ್ತೆ.. ಹೌದು ಅದು ಕಹಿ ಮತ್ತು ಸಿಹಿ ಅನುಭವ ಎರಡು ಕೊಡಬಹುದು ಆದರೂ ನನ್ನ ಬಾಳಿನಲ್ಲಿ ಸಿಹಿಯೇ ಸಿಕ್ಕಿದ್ದು ಹೆಚ್ಚು..

ನನ್ನ ಅಮ್ಮ ಅಪ್ಪ ಹಾಸನದ ಪ್ರತಿ ಪ್ರತಿ ಮನೆಗೂ ಚಿರಪರಿಚಿತ.. ಓಹ್ ನೀವು ವಿಶಾಲೂ ಮಕ್ಕಳು ನೀವು ಮಂಜಣ್ಣನ ಮಕ್ಕಳು ಎನ್ನುವುದೇ ಸರ್ವೇ ಸಾಮಾನ್ಯವಾದ ವಿಷಯ..

ವಿಷಯ ಅಂದರೆ.. ನನ್ನ ನೆಚ್ಚಿನ ಸೋದರ ಮಾವ ರಾಜ.. ನಮ್ಮ ಮನೆಯಲ್ಲಿ ಅವನಿಲ್ಲದೆ ನಾವು ಹೊರಗೆ ಹೋಗುತ್ತಿರಲಿಲ್ಲ. ಚಲನ ಚಿತ್ರ, ನೆಂಟರಿಷ್ಟರ ಕಾರ್ಯಕ್ರಮ.. ಕಡೆಯಲ್ಲಿ ಏನೂ ಇಲ್ಲದೆ ಹೋದರು ಸಂಜೆ ಆರಾಮಾಗಿ ಕೂತು ಅಂಗಡಿಯಿಂದ ತಂದ ಬೋಂಡಾ (ಹೌದು ಅವನಿಗೆ ಬೋಂಡಾ ಎಂದರೆ ಬಲು ಇಷ್ಟ).. ಚೆನ್ನಾಗಿ ತಿಂದು ಹರಟೆ ಹೊಡೆಯುವುದು ಸಾಮಾನ್ಯವಾಗಿತ್ತು. ನಮ್ಮ ಮನೆಯಲ್ಲಿ ಖಾಸಗಿ ಮಾತುಗಳು ಎನ್ನುವುದೇ ಇರಲಿಲ್ಲ.. ನಾವು ಮಾತಾಡುತ್ತಾ ಇದ್ದಾಗ ಅವನು ಬಂದರೆ ಆ ಮಾತುಗಳು ಹಾಗೆ ಮುಂದುವರೆಯುತ್ತಿದ್ದವು.. ಅವನದು ಒನ್ ವೆ ಟ್ರಾಫಿಕ್.. ತಾನು ಕೇಳಿಸಿಕೊಂಡದ್ದನ್ನು ತನ್ನ ಮನದಲ್ಲಿಯೇ ಇಟ್ಟುಕೊಳ್ಳುತ್ತಿದ್ದ.. ಯಾರಿಗೂ ಹೇಳುತ್ತಿರಲಿಲ್ಲ..

ನನ್ನ ಮದುವೆಗೆ ಮುಂಚೆ.. ನಾವಿಬ್ಬರು ಮಾಡದ ತರಲೆಗಳಿರಲಿಲ್ಲ.. ಎಲ್ಲೇ ಹೋಗಲಿ ನಾನು, ರಾಜ, ನನ್ನ ಅಣ್ಣ ವಿಜಯ, ನನ್ನ ತಮ್ಮ ಮುರುಳಿ ಒಟ್ಟಿಗೆ.. ತರಲೆಗಳು, ಹಾಸ್ಯಗಳು ಎಲ್ಲವೂ ಜೊತೆಯಾಗಿಯೇ. ...

ನನ್ನ ಮದುವೆ ಆಯಿತು... ಯಥಾ ಪ್ರಕಾರ ರಾಜನ ಮತ್ತು ನನ್ನ ಬಂಧ ಇನ್ನಷ್ಟು ಗಟ್ಟಿಯಾಯಿತು.. ಕಾರಣ ಸವಿತಾಳಿಗೆ ರಾಜನ ಪರಿಚಯ ಚೆನ್ನಾಗಿಯೇ ಇತ್ತು.. ಕಾರಣ ಸವಿತಾಳ ಅಮ್ಮ ಮತ್ತು ನನ್ನ ಸೋದರ ಮಾವನ ಕುಟುಂಬ ಹತ್ತಿರದ ಸಂಬಂಧವಾಗಿತ್ತು... ಹಾಗಾಗಿ ಸವಿತಾಳೇ ನನಗೆ ಹೇಳುತ್ತಿದ್ದಳು.. ಶ್ರೀ ರಾಜನನ್ನ ಕರೆಯಿರಿ.. ಎಲ್ಲಾದರೂ ಹೋಗೋಣ.. !!!

ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಅಕ್ಕ ಅಣ್ಣ ಅತ್ತಿಗೆ, ತಮ್ಮ ,  ನನ್ನ ಮಡದಿ, ಮಕ್ಕಳು ತುಂಬು ಕುಟುಂಬ..  ಅವನು ಬಂದರೆ ಒಂದು ರೀತಿಯಲ್ಲಿ ಸಂತಸ ನಗೆಯ ಚಂಡಮಾರುತವನ್ನೇ ತರುತ್ತಿದ್ದ.. ಪ್ರೀತಿಯಿಂದ ಒಬ್ಬರಿಗೊಬ್ಬರು ಬಯ್ದುಕೊಂಡರೂ.. ಬಾರೋ ಅಂತ ಮತ್ತೆ ಅಪ್ಪಿಕೊಂಡು ಮತ್ತೆ ನಗೆಯನ್ನು ತರಿಸುತ್ತಿದ್ದ.. !!!

ಇದು ಹಾಲು ಜೇನಿನ ಮನಸ್ಸಿನ ರಾಜನ ಸ್ಪೆಷಾಲಿಟಿ.. !!!

ಅವನ ಜೊತೆಯಲ್ಲಿನ ಕೆಲವು ಪ್ರಸಂಗಗಳು ಎಂದಿಗೂ ಅಮರ

೧) ನಾನು, ರಾಜ ಮತ್ತು ಸವಿತಾ ಮನೆಯ ಹತ್ತಿರವೇ ಇದ್ದ ಶನಿದೇವರ ಗುಡಿಗೆ ಹೋಗಿದ್ದೆವು.. ನಮಸ್ಕಾರಗಳು ಎಲ್ಲಾ ಆದ ಮೇಲೆ., ಪ್ರಸಾದ ಮೆಲ್ಲುತ್ತಾ ಹೊರಗೆ ಕೂತಿದ್ದೆವು.. ಅಂದು ಸಿಹಿ ಪೊಂಗಲ್ ಪ್ರಸಾದದ ರೂಪದಲ್ಲಿತ್ತು..
ರಾಜ .." ಪ್ರಸಾದ ಚೆನ್ನಾಗಿದೆ ಅಲ್ವೇನೋ ಅಂದ.. " ಸವಿತಾ ಹೂಗುಟ್ಟಿದಳು.. ಹೌದು ಚೆನ್ನಾಗಿದೆ ಎಂದಳು..
ನಾ ಸುಮ್ಮನಿದ್ದೆ.. ಮೆಲ್ಲಗೆ "ಹೌದು ರಾಜ ಚೆನ್ನಾಗಿದೆ.. ಇದಕ್ಕೆ ಒಗ್ಗರಣೆ ಹಾಕಿದ್ದಾರೆ ಚೆನ್ನಾಗಿರುತ್ತಿತ್ತು" ಅಂದೇ.. ಒಂದು ಕ್ಷಣ  ತಲೆ ಗಿರ್ರ್ ಅಂತ ತಿರುಗುತ್ತಿತ್ತು.. ಕಾರಣ ಗೊತ್ತೇ ರಾಜ ಫಟ್ ಅಂತ ನನ್ನ ತಲೆಗೆ ಬಿಟ್ಟಿದ್ದ.. ಮೂವರು ದೇವಸ್ಥಾನ ಎನ್ನುವುದನ್ನು ಮರೆತು ಜೋರಾಗಿ ನಗಲು ಶುರುಮಾಡಿದೆವು.. !!!

೨) "ಶ್ರೀಕಾಂತೂ.. ವಿಜಯನಗರದ ತ್ರಿವಳಿಗಳ ಬೋಂಡಾದ ಅಂಗಡಿಗೆ ಹೋಗಿ ತರೋಣ.. "
     "ಹೋಗಲೇ... ಅಲ್ಲಿ ಇರುವ ಜನರನ್ನು ನೆನೆಸಿಕೊಂಡರೆ.. ನಮಗೆ ಕಾದ ಎಣ್ಣೆ ಕೂಡ ಸಿಗೋಲ್ಲ"
     "ಬಾರಲೋ.. ಹೋಗೋಣಾ.. ಮಗ ಬರಿ ಇಲ್ಲಿ ಕೂತೆ ಕಥೆ ಹೇಳ್ತೀಯ.. "
     ಸರಿ ಇಬ್ಬರೂ ಹೋದೆವು.. ಅಲ್ಲಿ ಕಾದು ಕಾದು ಸಾಕಾಯಿತು.. ನಾ ಗೆದ್ದೇ ಎನ್ನುವ ಭಾವ ನನ್ನದು.. ಅವನು.. ಶ್ರೀಕಾಂತೂ ಸುಮ್ಮನೆ ಈ ತ್ರಿವಳಿಗಳ ಅಂಗಡಿ ಹತ್ತಿರ ನಿಂತು.. ಇವರು ಬೋಂಡಾ ಕೊಡುವ ಹೊತ್ತಿಗೆ ಆಸೆಯೇ ಹೋಗಿರುತ್ತೆ.. ಆಲೂಗೆಡ್ಡೆ, ಈರುಳ್ಳಿ , ಕಡಲೆಹಿಟ್ಟು ಕೊಂಡು ಸೀದಾ ಮನೆಗೆ ಹೋಗಿ ನನ್ನ ಅಮ್ಮನಿಗೆ (ಅರ್ಥಾತ್ ಅವನ ಅಕ್ಕ) ಕೊಟ್ಟು "ವಿಶಾಲೂ ನೀನೆ ಮಾಡಿಬಿಡು.. ಇವನ ಬಾಯಿ ಸುಡುಗಾಡು ಬಾಯಿ ಅದೇನು ಹೇಳ್ತಾನೋ ಹಾಗೆ ಆಗುತ್ತೆ.. ಅಂತ ಪ್ರೀತಿಯಿಂದ ಒಂದೆರಡು ಒದೆಗಡುಬನ್ನು ಕೊಟ್ಟಿದ್ದ.

೩) ಡರ್ ಡರ್ ... ಈ ಶಬ್ದ ನಮ್ಮ ಮನೆಯ ಮುಂದೆ ಬಂದು ನಿಂತರೆ ಸಾಕು ನಮ್ಮ ಮನೆಯ ಮಕ್ಕಳು ರಾಜ ಮಾವ ಬಂದ್ರು ರಾಜ ಮಾವ ಬಂದ್ರು ಅಂತ ಕುಣಿಯುತ್ತಿದ್ದವು.. ಅವನು ಬೈಕನ್ನು ಸರಿಯಾಗಿ ಗೇಟಿಗೆ ಅಡ್ಡ ನಿಲ್ಲಿಸುತ್ತಿದ್ದ.. ಎಲ್ಲಾ ಮಕ್ಕಳನ್ನು ಮಾತಾಡಿಸಿ.. ಆಮೇಲೆ ದೇಶಾವರಿ ನಗುತ್ತಾ ನಮ್ಮೆಲ್ಲರನ್ನೂ ಮಾತಾಡಿಸುತ್ತಿದ್ದ.. ಹಿರಿಯರು ಕಿರಿಯರು ಅನ್ನದೆ ಎಲ್ಲರಲ್ಲೂ ಬೆರೆಯುತ್ತಿದ್ದ ಅಪರೂಪದ ಮನಸ್ಸು ಅವನದು.
ಅವನ ಇಷ್ಟವಾದ ಬೈಕ್ ಜೊತೆಯಲ್ಲಿ ನನ್ನ ಅಣ್ಣನ ಮತ್ತು ಅಕ್ಕನ ಮಕ್ಕಳು.. ಆದಿತ್ಯ & ವರ್ಷ 

೪) ಅವನ ಅಪ್ಪ ಅರ್ಥಾತ್ ನನ್ನ ತಾತನ ತಿಥಿಯ ಪ್ರಸಾದ ನಮ್ಮ ಮನೆಗೆ ತಲುಪಿಸಲು ಕೊಟ್ಟಿದ್ದರು.. ಆಗ ಅವನ ಹತ್ತಿರ ಬಜಾಜ್ ಸ್ಕೂಟರ್ ಇತ್ತು.. ಸಂಜೆ ಮನೆಗೆ ಬಂದ.. ವಿಶಾಲೂ ಪ್ರಸಾದ ತಂದಿದ್ದೀನಿ ತಗೋ ಅಂತ ಕೊಟ್ಟಾ..
ಅಕ್ಕ ಮೊದಲು ಪ್ರಸಾದ ತಿಂದವಳೇ..
ಏನೋ ರಾಜ ಪೆಟ್ರೋಲ್ ವಾಸನೆ ಬರ್ತಾ ಇದಿಯಲ್ಲೋ ಅಂದಳು...
ನಿನಗೆ ಇರಬಾರದ ವಾಸನೆ ಬರುತ್ತೆ.. ಸುಮ್ನೆ ತಿನ್ನು.. ಪೆಟ್ರೋಲ್ ವಾಸನೆ ಅಂತೆ ಪೆಟ್ರೋಲ್ ವಾಸನೆ ಅಂತ ಬಯ್ದ

ಆಮೇಲೆ ಇಡೀ ಕವರನ್ನು ಬಿಚ್ಚಿ ನೋಡಿದರೆ.. ಆ೦ಬಡೇ, ವಡೆ, ರವೇ ಉಂಡೆ ಎಲ್ಲವೂ "ಘಮ್" ಅಂತ ಪೆಟ್ರೋಲ್ ಜೊತೆ ಇದ್ದೀವಿ ಎಂದು ಹೇಳುತ್ತಿತ್ತು.. ಅವನ ಸ್ಕೂಟರಿನ ಡಿಕ್ಕಿ ತೆಗೆದೆವು.. ಆಗ ಗೊತ್ತಾಯಿತು.. ಅವನು ಪೆಟ್ರೋಲ್ ಹಾಕಿಸುವಾಗ.. ಆ ಬಂಕಿನವನು ಒಂದಷ್ಟು ಹನಿಗಳನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಚೆಲ್ಲಿದ್ದ.. ಅದು ನಿಧಾನವಾಗಿ ಇಳಿದು ಡಿಕ್ಕಿಗೆ ಸೇರಿ.. ಅದರೊಳಗೆ ಇದ್ದ ಕಾಗದ ಪತ್ರಗಳು ಮತ್ತೆ ಪ್ರಸಾದ ಎಲ್ಲವನ್ನು ಪೆಟ್ರೋಲ್ ಮಯಮಾಡಿತ್ತು . !!!
ಅಂದಿನಿಂದ ಪೆಟ್ರೋಲ್ ವಡೆ ಅಂತಾನೆ ಅವನನ್ನು ರೇಗಿಸುತ್ತಿದ್ದೆವು..

ಹೀಗೆ ಅವನ ಲೋಕದಲ್ಲಿ ದುಃಖ ಎನ್ನುವ ಮಾತೆ ಇರುತ್ತಿರಲಿಲ್ಲ.. ಅವನ ಜೀವನ ಹಸನಾಗಿರಲಿಲ್ಲ.. ಆದರೆ ಅವನ ಸಂಪರ್ಕಕ್ಕೆ ಯಾರೇ ಬಂದರು ಅವನ ದುಃಖ ತಟ್ಟುತ್ತಿರಲಿಲ್ಲ ಬದಲಿಗೆ ನಕ್ಕು ನಕ್ಕು ಸುಸ್ತಾಗಿ ಬಿಡುತ್ತಿದ್ದರು..

ರಾಜನ ವ್ಯಕ್ತಿತ್ವದ ಬಗ್ಗೆ ಒಂದು ಮಾತು ಹೇಳಬೇಕೆಂದರೆ.. ಓದಿದ ನೆನಪು.. ಹಸು ಏನೇ ತಿಂದರೂ... ಅದೆಲ್ಲಾ ಹಸುವಿನ ಹೊಟ್ಟೆಯೊಳಗೆ ಕರಗಿ ಅಮೃತ ಸುಧೆಯುಳ್ಳ ಹಾಲು ಕೊಡುತ್ತದೆ .. ಹಾಗೆ ನಮ್ಮ ರಾಜ ಅವನಿಗೆ ಜೀವನದಲ್ಲಿ ಹಿಂಸೆ ಇದ್ದರೂ, -ಅವನನ್ನು ಕೆಲವರು ಅವಮಾನ ಮಾಡಿದರೂ, ಅವನಿಗೆ ಸಿಗಬೇಕಿದ್ದ ಸ್ಥಾನ ಮಾನಗಳು ಸಿಗದೇ ಇದ್ದರೂ, ಅವನ ಮಾತುಗಳು ಮಾತ್ರ ಎಂದಿಗೂ ಧನಾತ್ಮಕವಾಗಿರುತ್ತಿತ್ತು..

ನನಗೆ ನೆನಪಿರುವ ೨೦ವರ್ಷಗಳಿಗೂ ಮಿಗಿಲಾದ ಅವನ ಒಡನಾಟದಲ್ಲಿ ಅವನು ಒಮ್ಮೆಯೂ ಯಾರ ಬಗ್ಗೆಯೂ ಹಗುರಾಗಿ ಮಾತಾಡಿದ್ದು ನಾ ಕೇಳಿಲ್ಲ..

ಸ್ಫಟಿಕ ಮತ್ತು ರಾಜ ನನ್ನ ಪ್ರಕಾರ ಒಂದೇ !!!
ಸುಂದರ ನೆನಪುಗಳು ಅವನ ಜೊತೆಯಲ್ಲಿ ಹಾಗೆ ನಿಂತಿವೆ..
ಘಾಟಿ ಸುಬ್ರಮಣ್ಯಕ್ಕೆ ಹೋಗಿದ್ದಾಗಿನ ಚಿತ್ರ 
ಇಂದು ರಾಜನ ಜನುಮದಿನ.. ರಾಜ ನಿನ್ನ ಆಶೀರ್ವಾದ ಸದಾ ಇರುತ್ತದೆ.. ನಿನ್ನನ್ನು ದೈಹಿಕವಾಗಿ ನಾವು ಕಳೆದುಕೊಂಡಿದ್ದೇವೆ ಅಷ್ಟೇ.. ಆದರೆ ಮಾನಸಿಕವಾಗಿ ನಮ್ಮ ಮನೆ ಮನೆಗಳಲ್ಲೂ ಅಜರಾಮರ..

ಹಾಗೆಯೇ ಇಂದು ನನ್ನ ವೈವಾಹಿಕ ಜೀವನಕ್ಕೆ ಹದಿನೈದರ ಸಂಭ್ರಮ..
ನಾ ಇಷ್ಟ ಪಡುವ ನಿನ್ನ ತೂಗುದೀಪ ಶ್ರೀನಿವಾಸ ಶೈಲಿಯ ನಗುವನ್ನು ಹರಿಸಿಬಿಡು..
ಹಾಗೆ "ಶ್ರೀಕಾಂತೂ" ಎನ್ನುವ ನಿನ್ನ ಕೂಗು ನನ್ನ ಕಿವಿಗೆ ಯಾವಾಗಲೂ ಅಪ್ಪಳಿಸುತ್ತಲೇ ಇರಲಿ..!!!

ರಾಜ ನೀ ಅಜರಾಮರ!!!