Monday, April 8, 2019

ಪ್ರಸಾದ.. ದೇವಸ್ಥಾನ.. ರಾಜನೊಡನೆ ಸವಿ ನೆನಪು

"ಲೋ ಲೋ  ರಾಜ.. ಎಲ್ಲಿದ್ದೀಯೋ.. "

ನನ್ನ ಅವನ ಸಂಭಾಷಣೆ ಶುರುವಾಗುತ್ತಿದ್ದದ್ದೇ ಹಾಗೆ.. ಮಾವ ಅನ್ನುವ ಗೌರವ ಮನದೊಳಗೆ .. ಸ್ನೇಹಿತ ಅನ್ನುವ ಗತ್ತು ಹೊರಗೆ.. 

"ಕಪಾಳಕ್ಕೆ ಹಾಕ್ತೀನಿ.. ಬರ್ತೀನಿ ಅಂತ ಹೇಳಿದ್ದೆ ಅಲ್ವೇನೋ.. ಬರ್ತಾ ಇದ್ದೀನಿ.. ಈ ಟ್ರಾಫಿಕ್ ನಲ್ಲಿ ನಿನ್ನ ಕರೆ ಬಿಡು.. ಫೋನ್ ಇದೋ ಬೇಕೂಫ"

ಆಗ ಇಬ್ಬರಿಗೂ ಸಮಾಧಾನ.. 

ಮದುವೆಯಾದ ದಿನಗಳಲ್ಲಿ ಸವಿತಾ ಬಯ್ತಾ ಇರೋಳು.. "ರೀ ಮಾವನನ್ನು ಮಾವ ಅನ್ನೋಕೆ ಏನು ಕಾಯಿಲೆ ನಿಮಗೆ.. "

"ನಗೆ ಗೊತ್ತಿಲ್ಲ ಕಣೆ.. ನಂದು ಅವನದು ಬಂಧವೇ ಹಾಗೆ.. ಏನ್ಲ ಮಗ"  ಅಂತ ರಾಜನ ಕಡೆಗೆ ತಿರುಗಿದರೆ.. ಅವನ ಸ್ಪೆಷಲ್ ತೂಗುದೀಪ ಶ್ರೀನಿವಾಸ್ ನಗು ಹೊರಗೆ ಬರುತಿತ್ತು.. ಸವಿತಾ ನನ್ನ ತಲೆಗೆ ಒಂದು ಬಿಡ್ತಾ ಇದ್ಲು.. 

ಒಮ್ಮೆ ಶನಿವಾರ ಮನೆಗೆ ಬಂದ.. ಸವಿತಾ .. ರೀ ದೇವಸ್ಥಾನಕ್ಕೆ ಹೋಗೋಣ ಬನ್ನಿ ಅಂದ್ಲು.. ಮನೆಯ ಹತ್ತಿರವೇ ಇದ್ದ ಶನಿದೇವರ ಗುಡಿಗೆ ಹೋದೆವು.. 

ಯಥಾಪ್ರಕಾರ.. ನಮಸ್ಕಾರ, ತೀರ್ಥ, ಪ್ರಸಾದ ಎಲ್ಲವೂ ಸಿಕ್ಕಿತು.. ತು .. ಗುಡಿಯ ಮೆಟ್ಟಿಲಮೇಲೆ ಕೂತು ಸುಮ್ಮನೆ ತಿನ್ನುತ್ತಾ ಇದ್ದಾಗ.. 

"ಶ್ರೀಕಾಂತಾ ಹೇಗಿದೆಯೋ ಪ್ರಸಾದ"

"ಚೆನ್ನಾಗಿದೆ ಕಣೋ ರಾಜ.. ಸ್ವಲ್ಪ ಒಗ್ಗರಣೆ ಬೀಳಬೇಕಿತ್ತು.. ರುಚಿ ಸೊಗಸಾಗಿರೋದು. "

ತಿನ್ನುತ್ತಿದ್ದ ಕೈಯಿಂದಲೇ … ಪೈಡ್ ಅಂತ ತಲೆಗೆ ಕೊಟ್ಟಳು ಸವಿತಾ.. 

"ಯಾಕೆ ಏನಾಯಿತೆ?" ಅಂತ ತುಸು ಜೋರಾಗಿಯೇ ಕೇಳಿದೆ.. ಏಟು ಸರಿಯಾಗಿ ಬಿದ್ದಿತ್ತು.. !

"ನಿಮ್ ತಲೆ ಇದು..ಸಿಹಿ ಪೊಂಗಲ್.. ಇದಕ್ಕೆ ಯಾವ ಮಂಗಾ ಒಗ್ಗರಣೆ ಹಾಕ್ತಾನೆ.. ತಲೆ ಬೇಡ್ವಾ ನಿಮಗೆ.. !"

ಕೋಪದಿಂದ ಕುಡಿಯುತ್ತಲೇ ಇದ್ದಳು.. 

ನಾ ಜೋರಾಗಿ ನಕ್ಕೆ.. ರಾಜ ಅದು ದೇವಸ್ಥಾನ ಎನ್ನುವುದನ್ನು ಮರೆತು.. ನಗು ತೂಗುದೀಪ ಶ್ರೀನಿವಾಸ್ ಶೈಲಿಯಲ್ಲಿ ಜೋರಾಗಿ ನಕ್ಕೆ ಬಿಟ್ಟ.. 

"ಹಾಕು ಇನ್ನೊಂದು.. ಬರಿ ತರ್ಲೆ ಮಾಡ್ತಾನೆ.. ಪ್ರಸಾದ ಅಂತ ಗೊತ್ತಿಲ್ಲವೇನೋ ಬೇಕೂಫ.. ಒಗ್ಗರಣೆ ಅಂತೆ ಒಗ್ಗರಣೆ" ಅವನೊಂದು ಬಿಟ್ಟಾ.. 

ಒಂದು ಮಾತಿಗೆ ಎರಡು ಏಟು.. ಯಾವ ಪುರುಷಾರ್ಥಕ್ಕೆ ಈ ಮಾತು ಹೇಳಿದೆ ಅಂತ ಆ ಕ್ಷಣಕ್ಕೆ ಅನ್ನಿಸಿದರೂ.. ದೇವಸ್ಥಾನದ ಪ್ರಸಾದ ಸಿಕ್ಕಾಗೆಲ್ಲ.. ರಾಜ ನಮ್ಮ ಜೊತೆ ಇದ್ದಾಗೆಲ್ಲ (ಆ ನನ್ಮಗ ಯಾವಾಗಲೂ ನಮ್ಮ ಮನದಲ್ಲಿಯೇ ಇರ್ತಾನೆ) ಇದೆ ಮಾತುಗಳನ್ನು ಹೇಳಿ ಹೇಳಿ ನಗುತ್ತಿದ್ದೆವು.. 

ಸವಿತಾ ಅವನ ಮಾತಿಗೆ ತಾಳ ಹಾಕುತ್ತಿದ್ದದ್ದು, ಅವನು ಸಂಬಂಧಿಕರ ಬೇರುಗಳನ್ನೂ ಹುಡುಕಿ ಅವರು ಹೀಗೆ ಇವರು ಹೀಗೆ ಅಂತ ಬಂಧಗಳನ್ನು ಹೆಣೆಯುತ್ತಿದ್ದಾರೆ.. ಸವಿತಾ ಅದಕ್ಕೆ ಇನ್ನಷ್ಟು ಸೇರಿಸಿ ಬಂಧವನ್ನು ತನ್ನ ಹತ್ತಿರಕ್ಕೆ ಸೆಳೆದುಕೊಂಡು ಬಿಡುತ್ತಿದ್ದಳು.. 

ಅದಕ್ಕೆ ಸವಿತಾಗೆ ಯಾವಾಗಲೂ ರೇಗಿಸ್ತಾ ಇರ್ತಿದ್ದೆ..ಶ್ರೀ ಅಬ್ದುಲ್ ಕಲಾಂ ಸಾಹೇಬ್ರು ಜನಿವಾರ ಹಾಕಿಕೊಂಡಿದ್ದರೇ ಅವರನ್ನು ತನ್ನ ಸಂಬಂಧಿಗಳ ವೃತ್ತಕ್ಕೆ ಎಳೆದು ತರುತ್ತಿದ್ದಳು ಅಂತ.. 

ಹೌದು ಗೆಳೆತನ, ನೆಂಟಸ್ಥನ, ಕುಟುಂಬ ವೃಕ್ಷ.. ಇದೆಲ್ಲವನ್ನು ಸವಿವರವಾಗಿ ಬಿಡಿಸಿ ಇವರು ಇವರಿಗೆ ಹೀಗೆ ಬಂಧುಗಳು.. ಎನ್ನುವುದನ್ನು ಕರಾರುವಕ್ಕಾಗಿ ಹೇಳುತ್ತಿದ್ದದ್ದು ಸವಿತಾಳ ಸ್ಪೆಷಾಲಿಟಿ.. ಅದಕ್ಕೆ ತಕ್ಕಂತೆ.. ಇವನು ರಾಜ.. ಇಬ್ಬರಿಗೂ ಸಮಾನ ಬಂಧುಗಳು ಇದ್ದದ್ದು ನನಗೆ ತಲೆನೋವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದದ್ದು ಸುಳ್ಳಲ್ಲ.. 

ಸ್ವರ್ಗದಲ್ಲಿರುವ ಅವರಿಬ್ಬರೂ, ತಮ್ಮ ಬಂಧುಮಿತ್ರರೊಡನೆ ವಂಶವೃಕ್ಷವನ್ನು ಹರಡಿಕೊಂಡು ಚರ್ಚಿಸುತ್ತಾಳೆ ಇರುತ್ತಾರೆ.. 

ಇಂದು ಸವಿತಾ ಮತ್ತು ನಾನು ಸಪ್ತಪದಿ ತುಳಿದು ೧೭ ವಸಂತಗಳು ಆಯಿತು.. ಭೌತಿಕವಾಗಿ ಅವಳಿಲ್ಲ ಆದರೆ.. ಅವಳನ್ನು ನೆನೆಯದೆ ಒಂದು ಕ್ಷಣವೂ ಇಲ್ಲ.. ನನ್ನ ಮತ್ತು ಶೀತಲ್ ಆಡುವ ಪ್ರತಿ ಮಾತುಗಳಲ್ಲಿ ಅವಳಿದ್ದಾಳೆ.. ಅವಳು ಉಸಿರಾಡುತ್ತಾಳೆ.. 

ರಾಜ.. ಅವನ ಹೆಸರಿಗೆ ತಕ್ಕಂತೆ ರಾಜನೇ ಅವನು.. ಜಗತ್ತು ತನ್ನ ಬಗ್ಗೆ ಏನೇ ಹೇಳಲಿ.. ಆನೆ ನೆಡೆದದ್ದೇ ದಾರಿ ಎನ್ನುವ ಜಾಯಮಾನದವನು.. ಯಾರಿಗೂ ತಲೆ ಬಾಗಿಸುತ್ತಿರಲಿಲ್ಲ.. ತಲೆ ಬಾಗಿಸುವ ಕೆಲಸವನ್ನು ಮಾಡುತ್ತಿರಲಿಲ್ಲ.. ರಾಜ ಅಂದರೆ ರಾಜನೇ.. ಅವನಿಲ್ಲದ ಹನ್ನೊಂದು ವರ್ಷಗಳು ಕಳೆದರು.. ನಮ್ಮ ಮನೆಯಲ್ಲಿ ಅವನ ಮಾತಿಲ್ಲದೆ ದಿನವಿಲ್ಲ .. ಯಾವುದೋ ಒಂದು ನೆಪದಲ್ಲಿ ಅವನು ಇದ್ದೆ ಇರುತ್ತಾನೆ.. ಇಂದು ಅವನ ಜನುಮದಿನ.. ಅವನ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ.. 

ರಾಜ ನೀ ಅಜರಾಮರ.. !!!

ಸವಿತಾ ಹೊಸ ಬಾಳಿಗೆ ನೀ ಜೊತೆಯಾಗಿದ್ದೆ ಅಂದು.. 
ಸವಿ ಸವಿ ನೆನಪಲ್ಲಿ ಬದುಕು ಸಾಗಿಸುತ್ತಿರುವೆ ಇಂದು.. 

ಒಂದಷ್ಟು ನೆನಪು ಚಿತ್ರಗಳಲ್ಲಿ!!!


ನನ್ನ ಬಾಳಿಗೆ ಭಗವಂತ ಕೊಟ್ಟ ಅಂಕ 





ಮಕ್ಕಳೆಂದರೆ ರಾಜನಿಗೆ.. ರಾಜ ಎಂದರೆ ಮಕ್ಕಳಿಗೆ ಪ್ರಾಣ 
ನಮ್ಮ ಹತ್ತನೇ ವಾರ್ಷಿಕೋತ್ಸವ…  ಘಾಟಿ ಸುಬ್ರಮಣ್ಯ 


1 comment:

  1. Anna nimma baravanigeyalli ellaru jeevanta ... Ibrunu kooda tumba miss madkotini nanunu.... Eglu yaradru maroon shirt hakondu Ade personality iddoru nintidre raaja mavaneno ansatte... Nivu putti matra kandre savitha atge Elli anta bayi tudittanka baratte... Devara mosadalli ivaribbaru serihodru... Aste..

    ReplyDelete